ಯಕ್ಷಗಾನದ ಅಂತರಂಗಿಕ ಸತ್ವ ಹೊರಬರಲಿ - ಎಡನೀರು ಶ್ರೀ
ಲೇಖಕರು : ಉದಯವಾಣಿ
ಗುರುವಾರ, ಜೂನ್ 27 , 2013
|
ಯಕ್ಷಗಾನ ಕೇವಲ ತೀಟೆ ತೀರಿಸಿಕೊಳ್ಳುವ ಕಲಾ ಮಾಧ್ಯಮವಾಗದೆ ಅದರ ಅಂತರಂಗಿಕ ಸತ್ವ, ಭಾವ, ರಸ ಹೊರಹೊಮ್ಮಿಸುವ ಮಾಧ್ಯಮವಾಗಲಿ ಎಂದು ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಹೇಳಿದರು.
ಶ್ರೀ ಯಕ್ಷದೇವ ಮಿತ್ರ ಕಲಾಮಂಡಳಿ ಬೆಳುವಾಯಿ ಆಯೋಜಿಸಿದ 16ನೇ ವರ್ಷದ 'ಯಕ್ಷ ವೈಭವ - 2013' ಉದ್ಘಾಟಿಸಿ, ಮಂಡಳಿಯ ನೂತನ ವೆಬ್ಸೈಟ್ ( www.yakshadeva.com ) ಅನಾವರಣಗೊಳಿಸಿ ಅವರು ಮಾತಾಡಿದರು.
ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ| ಎಂ.ಎಲ್. ಸಾಮಗ ಅಧ್ಯಕ್ಷತೆ ವಹಿಸಿದ್ದರು.
|
ಮೂಡಬಿದಿರೆ: ಯಕ್ಷ ವೈಭವ - 2013 ಉದ್ಘಾಟನೆ.
|
ಯಕ್ಷಗಾನವೇ ಪ್ರಯೋಗ ರಂಗ. ಇಲ್ಲಿ ಪ್ರಯೋಗಶೀಲತೆ ಸಹಜ. ಆದರೆ ಪ್ರಯೋಗಶೀಲತೆಯ ಸಾಧುತ್ವ, ಯಾಕಾಗಿ, ಯಾರಿಗಾಗಿ, ಅಭಿವ್ಯಕ್ತಿ ವಿಧಾನ ಹೇಗೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಸ್ಪಷ್ಟ ಪರಿಕಲ್ಪನೆ ಬೇಕು. ಯಕ್ಷಗಾನ ಇತರ ಕಲೆಗಳಿಂದ ಪಡೆದುಕೊಳ್ಳುವುದಿದ್ದರೂ ಅದು ದೋಷಪೂರ್ಣ ಸಾಂಕರ್ಯವಾಗದ ಹಾಗೆ ಬೇರೆ ಬೇರೆ ದೃಷ್ಟಿಕೋನಗಳಿಂದ ನೋಡಿಕೊಳ್ಳಬೇಕು. ಯಕ್ಷ ದೇವ ಮಿತ್ರಕಲಾ ಮಂಡಳಿ ಯಕ್ಷಗಾನದ ಬಹುಸಾಧ್ಯತೆಗಳನ್ನು ಶೋಧಿಸುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಅಕಾಡೆಮಿಗಳಲ್ಲಿ ರಾಜಕೀಯ ಹಸ್ತಕ್ಷೇಪ:
ವಿಶೇಷ ಅತಿಥಿಯಾಗಿ ಭಾಗವಹಿಸಿದ ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸರವು ಕೃಷ್ಣ ಭಟ್ ಮಾತನಾಡಿ, ಎಲ್ಲ ಅರ್ಹತೆಗಳಿದ್ದೂ ಯಕ್ಷಗಾನ ವಿಶ್ವದ ಕಲೆಯಾಗದೇ ಇರುವುದಕ್ಕೆ ರಾಜಕೀಯ, ಆಡಳಿತ ವ್ಯವಸ್ಥೆಯೇ ಕಾರಣ ಎಂದು ವಿಷಾದ ವ್ಯಕ್ತಪಡಿಸಿದರು.
ಅಕಾಡೆಮಿಗಳಿಗೆ ಒಮ್ಮೆ ನೇಮಕಗೊಂಡ ಅಧ್ಯಕ್ಷರನ್ನು ರಾಜಕೀಯ ಸ್ಥಿತ್ಯಂತರಗಳ ಪರಿಣಾಮ ನಡುವೆ ಬದಲಾಯಿಸುವುದರಿಂದ ನಿಗದಿತ ಕಾರ್ಯವಾಹಿನಿಗೆ ಧಕ್ಕೆಯಾಗುತ್ತದೆ. ಇಂಥ ರಾಜಕೀಯ ಹಸ್ತಕ್ಷೇಪ ಸಲ್ಲದು. ಅಕಾಡೆಮಿಗಳು ರಾಜಕೀಯಸ್ಥರ ಹಿಂಬಾಲಕರ, ಸ್ಥಾನ ವಂಚಿತರ ಪುನರ್ವಸತಿ ಕೇಂದ್ರಗಳಾಗಬಾರದು, ಸಂಸ್ಕೃತಿಯ ಪ್ರಶ್ನೆ ಮಾತ್ರ ಮುಖ್ಯವಾಗಬೇಕು ಎಂದು ಅವರು ಹೇಳಿದರು.
ಉದ್ಯಮಿ ಎ.ಕೆ. ರಾವ್, ಯಕ್ಷಗಾನ ಸಂಘಟಕ ಭುಜಬಲಿ ಧರ್ಮಸ್ಥಳ ವಿಶೇಷ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಮಂಡಳಿಯ ಗೌರವಾಧ್ಯಕ್ಷ ಕೆ. ಶ್ರೀಪತಿ ಭಟ್ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಎಂ. ದೇವಾನಂದ ಭಟ್ ಪ್ರಸ್ತಾವನೆಗೈದರು. ವೆಬ್ಸೈಟ್ ನಿರೂಪಿಸಿದ ಇಮೇಜರ್ ಟೆಕ್ನಾಲಜೀಸ್ನ ಸತ್ಯಶಂಕರ ಅವರನ್ನು ಗೌರವಿಸಲಾಯಿತು. ಕಾರ್ಯದರ್ಶಿ ಮಹಾವೀರ ಪಾಂಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದ ಮುನ್ನ ಮಂಡಳಿಯ ಪುಟಾಣಿಗಳಿಂದ 'ರಾಣಿ ಶಶಿಪ್ರಭೆ' ಯಕ್ಷಗಾನ, ಬಳಿಕ 'ಯಕ್ಷ ಸಂಗೀತ ದಾಸ ಸಾಹಿತ್ಯ ನೃತ್ಯ ವೈಭವ' ಕಾರ್ಯಕ್ರಮ ನಡೆದವು.
ಕೃಪೆ : http://www.udayavani.com
|
|
|